May 17 14:18

ಓಟು ಹಾಕದಿರುವುದೂ ಪ್ರಜಾಪ್ರಭುತ್ವ!

ಚುನಾವಣೆಗಳು ಹತ್ತಿರ ಬಂದಾಗಲೆಲ್ಲಾ ಮತದಾನ ಎಷ್ಟು ಮುಖ್ಯ ಎಂಬುದರ ಕುರಿತ ಪ್ರಚಾರ ಆರಂಭವಾಗುತ್ತದೆ. ಒಂದೇ ಒಂದು ಓಟು ಯಾವ ಬದಲಾವಣೆಯನ್ನು ತರಬಲ್ಲದು ಎಂಬುದರ ಬಗ್ಗೆ ಮಾಧ್ಯಮಗಳು ಹೇಳುತ್ತವೆ. ಮತದಾನದ ದಿನವಿಡೀ ಮಾಧ್ಯಮಗಳು ಮತದಾನದ ಪ್ರಮಾಣದ ಮೇಲೆ ಕಣ್ಣಿರಿಸಿ ಚರ್ಚೆಗಳನ್ನು ನಡೆಸುತ್ತವೆ. ನಿರ್ದಿಷ್ಟ ಪ್ರದೇಶದಲ್ಲಿ ಏಕೆ ಮತದಾನ ಕಡಿಮೆಯಾಯಿತು ಎಂಬುದರ ಬಗ್ಗೆ ಕೂದಲು ಸೀಳುವ ಕೆಲಸವೂ ನಡೆಯುತ್ತದೆ.

ಭಾರತದ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಒಂದು ವಿದ್ಯಮಾನವೆಂದರೆ ನಗರ ಪ್ರದೇಶಗಳಲ್ಲಿ ಕಡಿಮೆ ಪ್ರಮಾಣದ ಮತದಾನ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮತದಾನ. ನಗರಗಳಲ್ಲಿರುವವರಲ್ಲಿ ಹೆಚ್ಚಿನವರು ಮಧ್ಯಮವರ್ಗದವರು, ಸುಶಿಕ್ಷಿತರು. ಗ್ರಾಮೀಣ ಪ್ರದೇಶಗಳಲ್ಲಿರುವವರ ಶಿಕ್ಷಣದ ಮಟ್ಟ ಕಡಿಮೆ. ಮಧ್ಯಮ ವರ್ಗದವರ ಸಂಖ್ಯೆಯೂ ಕಡಿಮೆ. ಮಧ್ಯಮ ವರ್ಗ ಭ್ರಷ್ಟಾಚಾರದ ಬಗ್ಗೆ ಕಿಡಿಕಾರುತ್ತದೆ. ರಾಜಕಾರಣಿಗಳನ್ನು ಟೀಕಿಸುತ್ತದೆ. ರಾಜಕಾರಣಿಗಳನ್ನು ಆರಿಸುವ ಪ್ರಕ್ರಿಯೆಯಲ್ಲಿ ಅದು ಪಾಲ್ಗೊಳ್ಳುವುದಿಲ್ಲ. ಮತದಾನದ ದಿನ ಸಿಗುವ ರಜೆಯನ್ನು ಅನುಭವಿಸಲು ಮನೆಯಲ್ಲಿ ಕುಳಿತು ನೋಡುವುದರಲ್ಲಿ ಕಳೆಯುತ್ತದೆ. ಮತಗಟ್ಟೆಯ ಹತ್ತಿರವೂ ಹೋಗುವುದಿಲ್ಲ. ಇವೆಲ್ಲವೂ ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವುದರ ಕಾರಣಗಳೆಂದು ಮಾಧ್ಯಮಗಳು ಹೇಳುತ್ತಿವೆ.  read more »

May 17 13:30

ಕರ್ನಾಟಕದ `ಪವರ್‌ ಪಾಲಿಟಿಕ್ಸ್‌'

ಆರು ವರ್ಷಗಳ ಹಿಂದಿನ ಸಂಗತಿಯಿದು. ಆ ಹೊತ್ತಿಗಾಗಲೇ ಎರಡೆರಡು ಬಾರಿ ಎಸ್‌.ಎಂ.ಕೃಷ್ಣರನ್ನು ಭಾರತದ ನಂಬರ್‌ ಒನ್‌ ಮುಖ್ಯಮಂತ್ರಿಯಾಗಿ `ಇಂಡಿಯಾ ಟುಡೇ' ಗುರುತಿಸಿತ್ತು. ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅವರನ್ನು ಹಿಂದಿಕ್ಕಿ ಕೃಷ್ಣ `ಸುಧಾರಣೆ'ಯ ಹಾದಿಯಲ್ಲಿ ಸಾಗುತ್ತಿದ್ದರು. ಈ ಸಮಯದಲ್ಲೇ ಕರ್ನಾಟಕದ ವಿದ್ಯುತ್‌ ನಿಗಮ ಮತ್ತು ಕರ್ನಾಟಕ ವಿದ್ಯುತ್‌ ಪ್ರಸರಣಾ ನಿಗಮಗಳು ತಿಳಿವಳಿಕೆ ಪತ್ರವೊಂದಕ್ಕೆ ಸಹಿ ಹಾಕುವ ಕಾರ್ಯಕ್ರಮವಿತ್ತು. ಅಲ್ಲಿ ಎಸ್‌.ಎಂ.ಕೃಷ್ಣ ಕರ್ನಾಟಕದ ವಿದ್ಯುತ್‌ ಕೊರತೆಯ ಬಗ್ಗೆ ಹೇಳುತ್ತಾ ರೈತರಿಗೆ ಉಚಿತ ವಿದ್ಯುತ್‌ ನೀಡುವುದರ ಅರ್ಥಹೀನತೆಯನ್ನು ವಿವರಿಸಿದರು. ಇಲ್ಲದ ವಿದ್ಯುತ್‌ ಅನ್ನು ಉಚಿತವಾಗಿ ಕೊಡುತ್ತೇವೆಂದು ಹೇಳುವುದರ ಬದಲಿಗೆ ಅಗತ್ಯವಿರುವುಷ್ಟು ವಿದ್ಯುತ್‌ ಉತ್ಪಾದಿಸಿ ನ್ಯಾಯಬದ್ಧ ದರದಲ್ಲಿ ಗುಣಮಟ್ಟದ ವಿದ್ಯುತ್‌ ಪೂರೈಸುವ ಅಗತ್ಯವನ್ನು ಪ್ರತಿಪಾದಿಸಿದರು.  read more »

Apr 22 13:50

ಪ್ರಾಯೋಗಿಕ ನಿಲುವೆಂಬ ಭ್ರಷ್ಟರ ಸಮರ್ಥನೆ

ರ್ನಾಟಕದ ವಿಧಾನಸಭಾ ಚುನಾವಣೆಗಳು ಘೋಷಣೆಯಾದ ತಕ್ಷಣ ಬಂದ ಬೌದ್ಧಿಕ ಜಗತ್ತಿನ ಪ್ರತಿಕ್ರಿಯೆಗಳಲ್ಲಿ ಮೊದಲನೆಯದ್ದು ಮತ್ತು ಬಹಳ ಮುಖ್ಯವಾದುದು ಡಾ.ಯು.ಆರ್‌. ಅನಂತಮೂರ್ತಿಯವರದ್ದು. `ಯಾರು ಬಂದರೇನು? ಎಲ್ಲರೂ ಭ್ರಷ್ಟರೇ...' ಎಂಬ ಸಿನಿಕ ಪ್ರತಿಕ್ರಿಯೆಯ ಬದಲಿಗೆ ಅವರು ರಚನಾತ್ಮಕವಾದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಹನ್ನೊಂದು ಅಂಶಗಳ ಜನತಾ ಪ್ರಣಾಳಿಕೆಯೊಂದರ ಕರಡನ್ನು ಬಿಡುಗಡೆ ಮಾಡಿ ಇದಕ್ಕೆ ಇನ್ನಷ್ಟು ಅಂಶಗಳನ್ನು ಸೇರಿಸಿ ಪೂರ್ಣಗೊಳಿಸೋಣ ಎಂದರು. ಈ ಪ್ರಣಾಳಿಕೆಗೆ ಬಂದ ಪ್ರತಿಕ್ರಿಯೆಗಳು ಬಹಳ ಕುತೂಹಲಕಾರಿ. ರಾಜಕೀಯ ಪಕ್ಷಗಳಿಗೆಲ್ಲಾ ಒಂದೊಂದು ಪ್ರಣಾಳಿಕೆಯಿದ್ದಂತೆ ಜನತೆಗೂ ಒಂದು ಪ್ರಣಾಳಿಕೆ ಇರುತ್ತದೆ ಎಂಬುದನ್ನು ಹೇಳಿದ ಅನಂತಮೂತಿರ್ಯವರ ನಿಲುವನ್ನು ಹಲವರು ಶ್ಲಾಘಿಸಿದರು. ವಿವಿಧ ಚಳವಳಿಗಳಲ್ಲಿ ತೊಡಗಿಕೊಂಡಿರುವ ಹಲವರು, ರಾಜಕಾರಣ ಪರಿಶುದ್ಧವಾಗಿರಬೇಕೆಂದು ಬಯಸುವವರು ಅನಂತಮೂರ್ತಿಯವರು ಮಂಡಿಸಿದ ಹನ್ನೊಂದು ಸೂತ್ರಗಳಿಗೆ ಪೂರಕವಾಗಿ ಒಂದಷ್ಟು ಅಂಶಗಳನ್ನು ಸೇರಿಸಿದರು.  read more »

Apr 16 21:32

ಗೆಲ್ಲುವ ಕುದುರೆಯೂ ಕೃತಿ ಚೌರ್ಯದ ಹಕ್ಕೂ

ಹರಿದಾಸ್ ಮುಂದ್ರಾ ಹಗರಣಕ್ಕೆ ಈಗ ಅರವತ್ತು ತುಂಬುತ್ತಿದೆ. ಸ್ವತಂತ್ರ ಭಾರತದ ಮೊದಲ ಹಣಕಾಸು ಹಗರಣ ಎನ್ನಬಹುದಾದ ಈ ಪ್ರಕರಣ ಭಾರತದ ಭ್ರಷ್ಟಾಚಾರದ ಇತಿಹಾಸದಲ್ಲೊಂದು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಪ್ರಕರಣ ಬಯಲಿಗೆ ತಂದದ್ದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರು ಅವರ ಅಳಿಯ ಫಿರೋಜ್ ಗಾಂಧಿ. ಈ ಪ್ರಕರಣ ಮಾವ ಮತ್ತು ಅಳಿಯನ ಮಧ್ಯೆ ಬಹುದೊಡ್ಡ ಭಿನ್ನಾಭಿಪ್ರಾಯಕ್ಕೂ ಕಾರಣವಾಗಿತ್ತು. ಈ ಭಿನ್ನಾಭಿಪ್ರಾಯಗಳೇನೇ ಇದ್ದರೂ ನೆಹರು ಈ ಹಗರಣದ ತನಿಖೆಗೆ ನ್ಯಾಯಮೂರ್ತಿ ಎಂ.ಸಿ. ಚಾಗ್ಲಾ ನೇತೃತ್ವದ ಆಯೋಗವೊಂದನ್ನು ರಚಿಸಿದ್ದರು. ಆಯೋಗದ ಶಿಫಾರಸನ್ನು ಕಾರ್ಯರೂಪಕ್ಕೂ ತಂದರು.  read more »

Apr 02 00:04

ಕನ್ನಡಿಯೆದುರಿನ ಗೊರಿಲ್ಲಾಗಳು ಮತ್ತು ಕನ್ನಡದ ತಲ್ಲಣಗಳು

ನೊಬೆಲ್‌ ಪುರಸ್ಕೃತ ಕೊಲಂಬಿಯನ್‌ ಲೇಖಕ ಗೇಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಜ್‌ ಸ್ಪ್ಯಾನಿಷ್‌ ಭಾಷೆಯಲ್ಲಿ ಬರೆಯುತ್ತಾರೆ. ಅದರ ಇಂಗ್ಲಿಷ್‌ ಮತ್ತು ಫ್ರೆಂಚ್‌ ಅನುವಾದಗಳ ಮೂಲಕ ಜಗತ್ತು ಅವರನ್ನು ಅರಿಯುತ್ತದೆ. ಅನುವಾದಗಳಲ್ಲೂ ಅವರು `ಬೆಸ್ಟ್‌ ಸೆಲ್ಲರ್‌' ಲೇಖಕ. ಅವರ ಬಹುಮುಖ್ಯ ಕಾದಂಬರಿಗಳಾದ `ಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯೂಡ್‌',`ಕ್ರಾನಿಕಲ್‌ ಆಫ್‌ ಡೆತ್‌ ಫೋರ್‌ಟೋಲ್ಡ್‌' ಮತ್ತು ಹಲವು ಸಣ್ಣ ಕತೆಗಳು ಕನ್ನಡಕ್ಕೂ ಅನುವಾದಗೊಂಡು ಜನಪ್ರಿಯವಾಗಿವೆ. ಈ ಲೇಖಕನ ಆತ್ಮಕತೆಯ ಮೊದಲ ಭಾಗವಾದ `ಲಿವಿಂಗ್‌ ಟು ಟೆಲ್‌ ದ ಟೇಲ್‌'ನಲ್ಲಿ ಮಾರ್ಕ್ವೆಜ್‌ ಶಾಲೆಗೆ ಸೇರುವುದಕ್ಕೆ ಸಂಬಂಧಿಸಿದಂತೆ ಅವರ ಅಪ್ಪ-ಅಮ್ಮನ ಮಧ್ಯೆ ನಡೆದ ಮಾತುಕತೆಯ ವಿವರವಿದೆ.  read more »

Feb 28 15:28

ದಕ್ಷ ಸೇವೆಯಲ್ಲಿ `ಸೇವೆ' ಎಷ್ಟಿದೆ?

ನಲ್ಲೂರು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಅಂಚಿನಲ್ಲಿರುವ ಒಂದು ಗ್ರಾಮ. ಹಾಸನ ಮತ್ತು ಸಕಲೇಶಪುರ ನಗರಗಳೆರಡರಿಂದಲೂ ಸಮಾನ ದೂರದಲ್ಲಿರುವ ಅಷ್ಟೇನೂ ಒಳ್ಳೆಯ ರಸ್ತೆಯಿಲ್ಲದ ಮಲೆನಾಡಿನ ಈ ಹಳ್ಳಿಗೆ ಹತ್ತು ವರ್ಷಗಳ ಹಿಂದೆ ಇದ್ದದ್ದು ಒಂದೇ ಬಸ್ಸು. ರಾಷ್ಟ್ರೀಯ ಹೆದ್ದಾರಿಯಿಂದ ಆರೇ ಕಿಲೋಮೀಟರ್‌ಗಳಷ್ಟು ದೂರವಿದ್ದರೂ ಬಸ್ಸು ಮಾತ್ರ ಬೆಳಿಗ್ಗೆ ಮತ್ತು ಸಂಜೆ ಬರುತ್ತಿತ್ತು. ಇತ್ತೀಚೆಗೆ ಬಸ್ಸುಗಳ ಸಂಖ್ಯೆ ನಾಲ್ಕಾಗಿದೆ. ಬೆಳಿಗ್ಗೆ ಸಕಲೇಶಪುರದಿಂದ ಬರುವ ಬಸ್ಸು ಪೂರ್ಣ ಖಾಲಿಯಾಗಿಯೇ ನಲ್ಲೂರಿಗೆ ಬರುತ್ತದೆ. ಅಲ್ಲಿಂದ ರಾಷ್ಟ್ರೀಯ ಹೆದ್ದಾರಿ ತಲುಪುವ ಆರು ಕಿಲೋಮೀಟರ್‌ಗಳ ಒಳಗೆ ಬಸ್ಸು ತುಂಬಿಕೊಳ್ಳುತ್ತದೆ. ಇದಕ್ಕೆ ಹತ್ತುವವರಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳದ್ದೇ ಸಿಂಹ ಪಾಲು. ಉಳಿದವರು ಆಸ್ಪತ್ರೆಗೆ ಹೋಗುವವರು, ಸಂತೆಗೆ ಹೋಗುವವರು ಹೀಗೆ ಆಯಾ ದಿನದ ವಿಶೇಷಗಳಿಗೆ ಪ್ರಯಾಣಿಸುವವರು. ಈ ಸಂಖ್ಯೆ ಕೆಲವೊಮ್ಮೆ ಬಸ್ಸಿನ ಮೇಲೆ ಹತ್ತಿ ಕುಳಿತುಕೊಳ್ಳುವಷ್ಟು ದೊಡ್ಡದಾಗಿರುತ್ತದೆ.  read more »

Feb 24 17:56

ಪ್ರತಿಭಟನೆಯ ಅವಸಾನ

ಕರವೇ ದಾಂದಲೆ

ಅದು 1999ರ ವಿಧಾನಸಭಾ ಚುನಾವಣೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾದ ಡಿ.ಬಿ. ಚಂದ್ರೇಗೌಡ ಸ್ಪರ್ಧಿಸಿದ್ದರು. ಈ ಹೊತ್ತಿಗಾಗಲೇ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕಾಗಿ ಗಿರಿಜನರನ್ನು ಒಕ್ಕಲೆಬ್ಬಿಸಲು ಅಗತ್ಯವಿರುವ ಔಪಚಾರಿಕತೆಗಳನ್ನು ಪೂರೈಸಿಕೊಂಡಿದ್ದ ಅರಣ್ಯ ಇಲಾಖೆ `ಕಾರ್ಯಾಚರಣೆ'ಗೆ ಮುಂದಾಗಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನವನ್ನು ವಿರೋಧಿಸಿ ಆದಿವಾಸಿ ಗಿರಿಜನ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲೊಂದು ಹೋರಾಟ ನಡೆಯುತ್ತಿತ್ತು. ಚುನಾವಣೆಯನ್ನು ಬಹಿಷ್ಕರಿಸುತ್ತೇವೆಂಬ ಮಾತುಗಳನ್ನೂ ಹೋರಾಟಗಾರರು ಆಡಿದ್ದರು. ಈ ಹೊತ್ತಿನಲ್ಲಿ ಡಿ.ಬಿ. ಚಂದ್ರೇಗೌಡರ ಮಧ್ಯ ಪ್ರವೇಶವಾಯಿತು. `ಗಿರಿಜನರ ಹಿತ ಕಾಪಾಡುತ್ತೇನೆಂದು ನಾನು ನನ್ನ ರಕ್ತದಲ್ಲಿ ಬೇಕಾದರೂ ಬರೆದುಕೊಡಲು ಸಿದ್ಧ' ಎಂಬ ಭರವಸೆ ನೀಡಿದರು.

ಚುನಾವಣಾ ಫಲಿತಾಂಶಗಳು ಹೊರಬಿದ್ದವು. ಡಿ.ಬಿ. ಚಂದ್ರೇಗೌಡರು ಗೆದ್ದಿದ್ದರು. ಅವರ ಗೆಲುವಿಗೆ ಆದಿವಾಸಿ-ಗಿರಿಜನರು ಎಷ್ಟರ ಮಟ್ಟಿಗೆ ಕಾರಣರಾಗಿದ್ದರೋ ಗೊತ್ತಿಲ್ಲ. ಚಂದ್ರೇಗೌಡರು ಎಸ್‌.ಎಂ.ಕೃಷ್ಣ ಸರಕಾರದಲ್ಲಿ ಕಾನೂನು ಸಚಿವರಾಗಿದ್ದಂತೂ ನಿಜ. ತಮ್ಮ ಕ್ಷೇತ್ರದ ಶಾಸಕರೇ ಕಾನೂನು ಸಚಿವರಾದದ್ದನ್ನು ಕಂಡ ಆದಿವಾಸಿಗಳು ತಮ್ಮ ಸಮಸ್ಯೆ ಪರಿಹಾರವಾಗುತ್ತದೆಂದು ನಂಬಿದರು. ಆದರೆ ಚಂದ್ರೇಗೌಡರು ನಿಧಾನವಾಗಿ ತಮ್ಮ ಮಾತಿನ ವರಸೆಯನ್ನು ಬದಲಾಯಿಸಿದರು. ರಾಷ್ಟ್ರೀಯ ಉದ್ಯಾನವನ ಕಾಯ್ದೆಗೂ ರಾಜ್ಯ ಸರಕಾರಕ್ಕೂ ಸಂಬಂಧವಿಲ್ಲ. ಅದು ಕೇಂದ್ರ ಸರಕಾರದ ಕಾನೂನು, ನಮಗೇನೂ ಮಾಡಲು ಸಾಧ್ಯವಿಲ್ಲ. ಹೀಗೆ ನೂರೆಂಟು ತಾಂತ್ರಿಕ ಕಾರಣಗಳನ್ನು ಮುಂದೊಡ್ಡತೊಡಗಿದರು.  read more »

Feb 08 13:41

ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು

ಮಾಧ್ಯಮಗಳಲ್ಲಿ ಪ್ರಕಟವಾಗುವ ಸಾವಿನ ಸುದ್ದಿಗಳಲ್ಲಿ ಎರಡು ವಿಧ. ಮೊದಲನೆಯದ್ದು ಕೇವಲ ಸಂಖ್ಯೆಗಳಲ್ಲಿ ಹೇಳುವ ಸಾವುಗಳು. ಎರಡನೆಯದ್ದು ಸತ್ತ ವ್ಯಕ್ತಿಯ ಕುರಿತು ಹೇಳುವಂಥದ್ದು. ಅಪಘಾತಗಳು, ಆಕಸ್ಮಿಕಗಳು, ದುರಂತಗಳು ಸಂಭವಿಸಿದಾಗ ಸತ್ತವರ ಸಂಖ್ಯೆಗಳೇ ಮುಖ್ಯವಾಗಿ ಸತ್ತವರು ಯಾರೆಂಬುದು ನಗಣ್ಯವಾಗಿಬಿಡುತ್ತವೆ. ಪ್ರಮುಖ ವ್ಯಕ್ತಿಗಳ ಮರಣದ ಸಂದರ್ಭದಲ್ಲಿ ವ್ಯಕ್ತಿಯೇ ಮುಖ್ಯ. ಈ ಎರಡೂ ಅಲ್ಲದ ಸಂದರ್ಭವೊಂದರಲ್ಲಿ ವ್ಯಕ್ತಿ ಮುಖ್ಯನಾಗುವುದೂ ಇದೆ. ಬೆಂಗಳೂರಿನ ಉದಾಹರಣೆಯನ್ನೇ ಪರಿಗಣಿಸುವುದಾದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ, ಕೊಲೆಯಾದರೆ ಆತ/ಆಕೆ `ಪ್ರಮುಖ'ನಲ್ಲದೇ ಹೋದರೂ ಮುಖ್ಯ ಸುದ್ದಿಯಾಗುವುದಿದೆ. ಹೊರ ಗುತ್ತಿಗೆ ಉದ್ದಿಮೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಕೊಲೆಯಾದಾಗ ಅದು ಸುಮಾರು ಒಂದು ತಿಂಗಳ ಕಾಲ ನಿರಂತರವಾಗಿ ಸುದ್ದಿಯಾಗಿತ್ತು. ಈಗಲೂ ಆ ಪ್ರಕರಣದ ವಿಚಾರಣೆಯ ವಿವರಗಳು ಮಾಧ್ಯಮಗಳಲ್ಲಿ ಕಾಣಿಸುತ್ತಲೇ ಇರುತ್ತದೆ.  read more »

Feb 01 17:44

ಅಫ್ತಾಬ್‌ ಅಲಂ ಅನ್ಸಾರಿ ಬಾಂಗ್ಲಾದೇಶಿಯಾದದ್ದು

ತೊಳೆದು ಶುಭ್ರವಾಗಿರುವ ಟ್ಯಾಕ್ಸಿಗಳು ಎಂದಿನಂತೆ ಆ ಮುಂಜಾನೆಯೂ ಅಜೀಜ್‌ಗೆ ಉತ್ಸಾಹ ತುಂಬಿದವು.N S Madhavan ಅಂಥದ್ದೊಂದು ಟ್ಯಾಕ್ಸಿಯಲ್ಲಿ ಹತ್ತಿ ಕುಳಿತು ಆಫೀಸಿನತ್ತ ಹೊರಟ ಅವನಿಗೆ ಚುನಾವಣೆಯ ಗಡಿಬಿಡಿಯನ್ನು ಮುಗಿಸಿ ಸುಧಾರಿಸಿಕೊಳ್ಳುತ್ತಿರುವ ಮುಂಬೈ ಕಾಣಿಸುವುದರ ಜತೆಗೆ ಟ್ಯಾಕ್ಸಿಯ ಗಾಜಿಗಂಟಿಸಿದ್ದ ಹುಲಿಯ ತಲೆ ಇರುವ ಸ್ಟಿಕರ್‌ ಕಾಣಿಸಿತು.ಹಿಂದಿನ ದಿನ ಪ್ರದೀಪ್‌ ಪಿಳ್ಳೈ ಊಟದ ಹೊತ್ತಿನಲ್ಲಿ `ಸರಕಾರ ಬದಲಾಗಿದೆ' ಎಂದಿದ್ದ. ಜಯಂತ್‌ ಕರ್ಮಾರ್ಕರ್‌ ಮತ್ತೇನೋ ಹೇಳಿದ್ದ ಆದರೆ ಪ್ರದೀಪ್‌ ಪಿಳ್ಳೆಯ ಮಾತು ಸುಖಾ ಸುಮ್ಮನೆ ನಿಗೂಢವನ್ನು ಧ್ವನಿಸುತ್ತಿದೆ ಎಂದು ಅಜೀಜ್‌ಗೆ ಅನ್ನಿಸಿತ್ತು.

ಟ್ಯಾಕ್ಸಿ ಬಂದು ನರೀಮನ್‌ ಪಾಯಿಂಟ್‌ನ ಬಹುಮಹಡಿ ಕಟ್ಟಡದ ಎದುರು ನಿಲ್ಲುವ ಹೊತ್ತಿಗೆ ಅಜೀಜ್‌ಗೆ ಮುಂಬೈ ಬದಲಾಗಿಲ್ಲ ಅನ್ನಿಸತೊಡಗಿತ್ತು. ಲೋಕಲ್‌ ಟ್ರೈನುಗಳು ಮುಂಬೈಯನ್ನು ಸೀಳಿಕೊಂಡು ಓಡುತ್ತಿವೆ. ಚರ್ಚ್‌ ಗೇಟ್‌ನಲ್ಲಿ ಎಂದಿನಂತೆ ಪ್ರಯಾಣಿಕರ ಗುಂಪು ಇಳಿದು ಆಚೀಚೆ ನೋಡದೆ ಓಡುತ್ತಿದೆ. ಊಟದ ಡಬ್ಬ ಸೈಕಲೇರುತ್ತಿವೆ...  read more »